Total Pageviews

Tuesday, February 3, 2015

ಕಳ್ಳು-ಬಳ್ಳಿಯ ಕತ್ತರಿಸಿಕೊಂಡು ದೂರವಾದ ಡಾ.ವಸು ಮಳಲಿ :
-ಡಾ.ಅಭಿನಂದನ ಬಳ್ಳಾರಿ .
"ಯಾವುದೇ ಚಿಂತನೆಯನ್ನು ತಡೆಹಿಡಿಯಲಾಗದು , ಅದು ಪರಿಮಳದಂತೆ ಹರಡುತ್ತದೆ ಎನ್ನುವುದಕ್ಕೆ ಮಾರ್ಕ್ಸ್ ವಾದ ಉತ್ತಮ ಸಾಕ್ಷಿ" ಎನ್ನುವ ಬರಹ ನನಗೆ ಇವತ್ತು ನೆನಪಿದೆ . ಕನ್ನಡ ಹಾಗೂ ಕರ್ನಾಟಕದ ಇತಿಹಾಸವನ್ನು ಹೊಸ ದೃಷ್ಠಿಕೋನದಿಂದ ನೋಡಿದ್ದ , ಭಾರತದ ಚರಿತ್ರೆಯನ್ನು ವಿಶಿಷ್ಟವಾಗಿ ವಿಮರ್ಶಿಸುತ್ತಿದ್ದ ಅಂಕಣಕಾರರು , ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು , ಲೇಖಕರು ಆಗಿದ್ದ ವಸು ಮಳಲಿ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ . ಅಪಾರ ಚಿಂತನೆಯಿಂದ ಬ್ರಾಹ್ಮಣ್ಯದ ಬಗ್ಗೆ , ಮಹಾಕಾವ್ಯಗಳ ಬಗ್ಗೆ , ಇತಿಹಾಸ ತಜ್ಞರ ಬಗ್ಗೆ , ಬಡವರ ಬಗ್ಗೆ , ರಾಜಕೀಯದ ಬಗ್ಗೆ , ಪರಿಸರದ ಬಗ್ಗೆ ಹೀಗೆ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಮನಮುಟ್ಟುವಂತೆ ಬರೆಯುತ್ತಿದ್ದ ವಸುರವರ ಜ್ಞಾನದ ದಾಹಕ್ಕೆ ಮೀತಿಯೇ ಇರಲಿಲ್ಲ. ಜಾತಿ , ಒಳಜಾತಿ , ಧರ್ಮ , ಭಾಷೆ , ನೆಲದಿಂದ ನಾವೆಲ್ಲ ಒಂದು ಎಂದು ಭಾವಿಸುವ ಸಮಾಜದ ಸೃಷ್ಟಿ ದುರದೃಷ್ಟಕರ ಎಂದು ಪ್ರತಿಪಾದಿಸಿದ್ದ ಅವರು "ದೈವಗಳು ಸೊಗಸಾಗಿ ಜನರನ್ನು ಒಗ್ಗೂಡಿಸುವಂತೆ , ಉಳಿದವರನ್ನು ದೂರವಿಡುತ್ತದೆ " ಎಂದು ಹೇಳಿದ್ದರು . "ರಾಷ್ಟ್ರೀಯತೆಯ ಕಲ್ಪನೆಗೆ ಧರ್ಮ ಬೆರೆತರೆ ಮಾದಕ ದೃವ್ಯಗಳೆರಡನ್ನು ಬೆರೆಸಿ ಕುಡಿದಂತೆ " ಎನ್ನುವ ವೈಚಾರಿಕತೆಯಲ್ಲಿರುವ ಸೂಕ್ಷ್ಮತೆಯನ್ನು ಮತ್ತು ಗ್ರಹಿಕೆಯನ್ನು ನೋಡಿ ಬೆಕ್ಕಸ ಬೆರಗಾದಾರು .... ಇದು ವಸು ಮಳಸಿ ಯೋಚಿಸುತ್ತಿದ್ದ ಪರಿ !! ಸ್ಲಂನ ಬಗ್ಗೆ ಅಲ್ಲಿ ವಾಸಿಸುವ ವಲಸೆ ಬಂದ ಬಡಜನರನ್ನು ಎತ್ತಂಗಡಿ ಮಾಡುವ ನಗರ ಪ್ರದೇಶದ ಕ್ರೌರ್ಯವನ್ನು ಖಂಡಿಸಿದ್ದ ವಸು , ಬಡವರ ಪರ ಕಾಳಜಿ ವಹಿಸಿ ಬಡವರನ್ನು ಹಾಗೂ ಸ್ಲಂಗಳನ್ನು ನಿರ್ಮೂಲನೆ ಮಾಡಬಾರದು ಬದಲಾಗಿ ಮನಸ್ಸಿಗೆ ಹತ್ತಿರುವ ಕೊಳೆ , ನಗರವೆಂಬ ಸೋಗಿನ ದುರ್ನಾತ , ಮುಸುಕಿನೊಳಗೆ ನಾರುವ ಭ್ರಷ್ಟಾಚಾರವನ್ನು ತೊಳೆದು ಹಾಕಬೇಕಿದೆ ಎಂದು ಸಾರಿದ್ದರು . ವಿಚಾರಗಳನ್ನು ಗ್ರಹಿಸಲು ಅವರಲ್ಲಿ ಇದ್ದ ಆ ಒಂದು ಬುದ್ಧಿವಂತ ಕ್ರಾಂತಿಯ ಚೇತನ ಜಾಗೃತವಾಗಿತ್ತು . ಇತಿಹಾಸವನ್ನು ನೋಡಲು ಬೇಕಾಗಿದ್ದ ಸ್ಥಿತಿಸ್ಥಾಪಕತ್ವ ಅವರಲ್ಲಿ ಇದ್ದುಅದರಿಂದಲೇ ಬರಹದ ಬಲವನ್ನು ಹೆಚ್ಚಿಸುವಂತೆ ಅಕ್ಷರಗಲು ಇತಿಹಾಸವನ್ನು ಮರುಸೃಷ್ಠಿಮಾಡುತ್ತಿದ್ದವು . ಲೈಂಗಿಕ ಅಲ್ಪಸಂಖ್ಯಾತರ ಪುನರ್ವಸತಿ ಕುರಿತಾಗುಇ ಸಭೆಯೊಂದರಲ್ಲಿ ಮಾತನಾಡಿದ್ದ ವಸುರವರು , ಲೈಂಗಿಕ ಅಲ್ಪಸಂಖ್ಯಾತರ ಸಹಾಯವಾಣಿಯನ್ನು ಬಿಡುಗಡೆಮಾಡುವ ಸಂದರ್ಭದಲ್ಲಿ ಸಹಾಯವಾಣಿಯು ಹೇಗೆ ದುರುಪಯೋಗವಾಗುತ್ತದೆ ಎಂದು ಹೇಳಿ ವ್ಯವಸ್ಥಾಪಕರ ಕೆಂಗಣ್ಣಿಗೆ ಗುರಿಯಾಗಿದ್ದರು . ಆಧುನಿಕ ಸಲಕರಣೆಗಳನ್ನು ಬಳಕೆಯಿಂದ ಪಿಡುಗುಗಳಿಗೆ ಆಧುನಿಕ ಸ್ವರೂಪ ಬರುತ್ತದೆ ಎಂದು ಆ ಸಭೆಯಲ್ಲಿ ಅವರು ಪ್ರತಿಪಾದಿಸಿದ್ದರು . ಬಂಡವಾಳಶಾಹಿಗಳ ವಿರುದ್ಧ ರಣಕಹಳೆಯನ್ನು ಮೊಳಗಿಸಿದವರಂತೆ ಬರೆಯುತ್ತಿದ್ದ ಅವರು , ರಾಜಕೀಯದಲ್ಲಿ ಉದ್ಯಮಿಗಳು ಹೂಡುವ ಹಣ ಐದು ವರ್ಷ ನಿರಂತರವಾಗಿ ಕರೆಯುವ ಹಸುವಿಗೆ ಹಿಂಡಿಹಾಕಿದಂತೆ,ಜನಸಾಮಾನ್ಯರಿಗೆ ಇರುವ ಎಕೈಕ ಬಂಡವಾಳ ವೋಟು , ಅದನ್ನು ಖಡ್ಗವಾಗಿಸಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡಬೇಕಿದೆ ಎನ್ನುವ ಕಿಚ್ಚನ್ನು ಹಚ್ಚಿ, ಕ್ಯಾನ್ಸರನಿಂದ ಬಳಲುತ್ತಿದ್ದರೂ ಇತಿಹಾಸವನ್ನು , ಜನಪರ ಕಾಳಜಿಯನ್ನು , ಮೌಲ್ಯಾಧಾರಿತ ವೈಚಾರಿಕತೆಯನ್ನು , ಮಾನವೀಯ ಗುಣಗಳನ್ನು ತೆರೆದಿಡುತ್ತಿದ್ದ ಡಾ.ವಸು ಮಳಲಿ ತಮ್ಮ ಓದುಗರೊಂದಿಗೆ ಹೊಂದಿದ್ದ ಕಳ್ಳು-ಬಳ್ಳಿಯನ್ನು ಕತ್ತರಿಸಿಕೊಂಡು ಮರೆಯಾಗಿದ್ದಾರೆ . ವಸುರವರ ಸಂಶೋಧನೆ ಇತಿಹಾಸದ ಸಂಕೀರ್ಣತೆಯನ್ನು ಸಂಪೂರ್ಣಗೊಳಿಸಿದೆ(ಕಾಂಪ್ಲೆಕ್ಸಿಟಿ ಟು ಕಂಪ್ಲೀಟ್) . ಅವರ ಚಿಂತನೆಯನ್ನು ನಾವು ಗೌರವಿಸುತ್ತ , ಪಾಲಿಸುತ್ತ ಮರೆಯಾದ ವಸುವಿನ ಆತ್ಮಕ್ಕೆ ಶಾಂತಿ ಕೋರೊಣ .